SRI VIJAYEENDRA THEERTHARU

 ವಿಜಯೀಂದ್ರತೀರ್ಥರು.

ವಿಜಯೀಂದ್ರಸುರತರು ಛಾಯೆಲಿ ಬದುಕಿರೋ
ವಿಜಯ ಸಾಧಿಸಿ ಭವಘರ್ಮವ ತೊರೆಯಿರೋ

ಕುಂಭಕೋಣದಿ ವರ ಕಾವೇರಿ ತಟದಲ್ಲಿ
ಶೋಭಿಪ ನಂದತೀರ್ಥ ಮಹಿಯೊಳ್ ಬೇರೂರಿದ
ವೈಭವದಲಿ ವ್ಯಾಸ ಮುನಿ ವೇದಿಯಲಿ ಮೆರೆವ
ಅಂಬುಸಿಂಚನಗೈದು ಸುರೇಂದ್ರರು ಬೆಳೆಸಿದ.          

ನಾನಾ ವಿದ್ಯಾಶಾಖೆಗಳ ಪಸರಿಸಿ ನಿಂತ
ಸಾನುಕ್ರೋಶದಿ ಸುಜನವಿಹಗ ವರ್ಗವ ಪೊರೆವ
ಮೌನದಿ ಭಜಿಪರ್ಗೆ ಮುಕ್ತಾಫಲಗಳನಿತ್ತು
ಬೇನೆ ಕಳೆವ ಓಷಧಿಗಳನೊಳಗೊಂಡ.                  

ಸೇವಿಪ ಜನರಿಗೆ ಇಷ್ಟಾರ್ಥ ವರವೀವ
ಭಾವಜನಯ್ಯನ ಮುಟ್ಟಿ ಭಜಿಸುವ ವೃಕ್ಷ
ಕೋವಿದರಿಗೆ ಸ್ವಾದು ಗ್ರಂಥಫಲಗಳನೀವ
ಪಾವನ ರಾಘವ ವಿಠಲ ನಿಂತು ನಲಿವ.

Comments

Popular posts from this blog

MADIVANTARU UNABAHUDANNA

RAMANA TUGIRO LALI PADA

SHUBHAKRUT