KELE KELE YASHODE

ಕೇಳೆ ಕೇಳೆ ಯಶೋದೆ ನಿನ್ನ ಮಗನ ಚೇಷ್ಟೆಯ‌    
ವ್ಯಾಳೆ ವ್ಯಾಳೆಗೆ ಕೂಡಿ ಸಖರಿಂ ಬರುವ ಚೋರನ

ಬೇಡ ಕೃಷ್ಣನೇ ಕೆನೆಯ ಪಾಲದು
ಕುಡಿಯದಿರೆಲೋ ಹರಿಗೆ ಮೀಸಲು 
ಬೇಡಿಕೊಂಡರೆ ನಗುತಾ ಗೋಪೀ 
ಕುಡಿದು ತಾನೆ ದೈವನೆಂದನು.        ೧

ಬರುವ ಚೆಲುವನು ಬೆಣ್ಣೆ ಕದಿವನು
ಒರಳ ಮೇಲೆ ಕುಳಿತು ಮೆಲುವ
ಪರಮ ಎಂಜಲ ಕೊಡದೆ ಪೋಪನು 
ದುರುಳತನದಲಿ ಮರ್ಕಟಕಿಡುವ.     ೨

ಕುದಿವ ಹಾಲನು ಇಡಲು ಗೋಪಿ 
ಒದಗಿ ಬಂದು ಕುಡಿವನಮ್ಮ
ಉದಧಿ ಮೊಗದೊಳು ಇರುವುದೇನೆ
ಚದುರ ಕೃಷ್ಣಗೆ ತಿಳಿಯೆನಮ್ಮ.          ೩

ಕತ್ತಲೆ ಕೋಣೆಲಿ ಗಡಿಗೆ ಬಡಿಯಲು
ಮೆತ್ತಗೆ  ಹ್ಯಾಂಗೆ ಹೋಗುವನಮ್ಮ 
ಕಿತ್ತೆಸೆದು ಭಾಂಡವ  ಬೆಣ್ಣೆ ಮೆಲುವ 
ನೇತ್ರದಿ ತರಣಿ ಶಶಿಗಳಿಹರೆ.             ೪

ಹಿಂದಿನಿಂದಲಿ ಪಿಡಿಯಲೋಸುಗ 
ಮಂದಗತಿಯಲಿ ಬರಲು ನಾನು 
ಮಂದಹಾಸವ ಸೂಸಿ ಓಡಿದ 
ಕಂದ ನಿನ್ನಯ ವಿಶ್ವನೇತ್ರನೆ .         ೫

ಒಂದು ಕರದಲಿ ಗಡಿಗೆ ಒಡಿವನು 
ಒಂದು ಕರದಲಿ ಘಂಟೆ ಪಿಡಿವನು
ಒಂದು ಕರದಲಿ  ಬೆಣ್ಣೆ ಮೆಲುವನು
ಒಂದು ಕರದಿಂದ ಸಖರಿಗಿಡುವ.      ೬

ಬಿಗಿಯಲೇನೇ ಕಂಬಕಿವನ 
ಅಗಮ್ಯ ಮಹಿಮನು ಕಂಬ ಸೆಳೆವನು
ನಗುತ ಸಕಲರ ಮನವ ಸೆಳೆವನು 
ಜಗನ್ನಿಯಾಮಕನೇನೆ ಕಂದನು.      ೭


ಎರಡು ಕರಗಳು ಬರುವ ಕಾಲಕೆ
ಎರಡೆರಡು ಮತ್ತೆ ಭೂತಿವಂತಗೆ
ಬರುವ ಕಾಲಕೆ ಗಿಡ್ಡ ರೂಪನು 
ಹಿರಿದು ರೂಪದಿ ಗಡಿಗೆ ಪಿಡಿವನು.   ೮


ಕಟ್ಟಿದಂತಹ ವತ್ಸಗಳನು 
ಪುಟ್ಟ ಚೆಲುವನೆ ಏಕೆ ಬಿಡಿಸುವೆ
ಮುಟ್ಟಿ ಭಜಿಪರ ಸೃತಿಯ ಬಂಧವ
ಬಿಟ್ಟು ಕಳಿಸುವ ವೃತ್ತಿ ಎಂಬನು.     ೯

ಇಷ್ಟು ಚಿಕ್ಕ ರೂಪದಿರುವನು 
ಎಷ್ಟು ಮನೆಯ ಹಾಲು ಕುಡಿವನು 
ಸೃಷ್ಟಿಕಾಲದಿ ಭೂತಗಣಗಳ 
ಕುಕ್ಷಿಯೊಳಗೆ ಧರಿಪನೇನೆ.            ೧೦

ನಂದಗೋಪನ ಸುತನು ಅಲ್ಲವೋ
ಕಂದ ನೀನು ಹೀಗೆ ಮಾಡಲು
ಎಂದರೆ ಗೋಪಿ ಹುಂಬತನದಲಿ
ನಂದನ ಸುತನು ಅಲ್ಲವೆನುವನು. ೧೧

ಏಧಮಾನ ದ್ವೇಷಿ ಕೃಷ್ಣನು 
ಎಂದು ಚಿಂತಿಸೆ ಚೋರತನವನು
ಮೋದವೀವನು ದುರಿತ ಕಳೆದು 
ವೇದವೇದ್ಯನು ಸಾಧು ಚರಿತನು. ೧೨

ನಾರದಾದಿ ಮುನಿಯು ಕೇಳಲು 
ಕ್ಷೀರ ಕಡಲ ಹ್ಯಾಂಗೆ ಇತ್ತೆಯೊ
ಮಾರಿ ತೋರಲು ರಾಘವ ವಿಠಲನು
ಸೂರಿಗಮ್ಯನು ಹೀಂಗೆ ನಲಿದನು. ೧೩

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha