JAYAVENNIRE HARIGE NITYADALI - DASHAVATHARA

ಜಯವೆನ್ನಿರಿ ಹರಿಗೆ ನಿತ್ಯದಲಿ
ಜಯವೆನ್ನಿರಿ ಹರಿಗೆ ಜಯವೆನ್ನಿರಿ.

ಮತ್ಸ್ಯರೂಪದಿ ಪ್ರಳಯ ಜಲವನ್ನು ಹೊಕ್ಕಿ ರಮಿಸಿದ ಸುಗುಣನಿಗೆ
ಸತ್ಯವ್ರತಗೆ ಮನುಪದ ಕೊಟ್ಟಗೆ ವೇದವ ಮರಳಿ ತಂದವಗೆ. 

ಕೂರ್ಮಗೆ ಬೆಟ್ಟ ಬೆನ್ನಲ್ಲಿ ಪೊತ್ತಗೆ ವೀರಗೆ ಸತ್ಯ ಸಂಕಲ್ಪಗೆ
ಮರ್ಮ ತಿಳಿಸದೆ ಅಸುರರ್ಗೆ ಸುಧೆಯನ್ನು ತಪ್ಪಿಸಿ ಸುರರ  ಪೊರೆದವಗೆ. 

ವರಹರೂಪಿ ದುಷ್ಟನೆಗೊತ್ತಿ ಧರೆಯ ಮೇಲೆತ್ತಿ ಸಲಹಿದಗೆ
ವರಕೊಟ್ಟ ವಿಧಿಯ ಮಾತನ್ನು ಮೀರಿದ ತ್ರಿಗುಣಹೀನ ಧೀರನಿಗೆ.

ಪ್ರಹ್ಲಾದ ವರದಗೆ ನರಹರಿ ರೂಪಗೆ ದುಷ್ಟನ ಸುಲಭದಿ ಸೀಳಿದಗೆ
ಆಹ್ಲಾದ ಜಗದಲ್ಲಿ ತುಂಬಿದ ವೀರಗೆ ನೆನೆವರ ಭಯ ಕಳೆಯುವಗೆ.

ವಾಮನರೂಪದಿ ದಾನವ ಬೇಡಿ ಮೂರ್ಜಗವನ್ನೇ ಅಳಿದವಗೆ 
ವಾಮದೇವ ಬೊಮ್ಮ ಮೊದಲಾದ ದೇವವೃಂದದಿಂ ನಿತ್ಯ ವಂದಿತಗೆ. 

ರಾಮಗೆ ಭೃಗುವಂಶತಿಲಕರೂಪಗೆ ದುಷ್ಟಕ್ಷತ್ರವಂಶ ಕಿತ್ತೊಗೆದಗೆ
ಸಾಮದಿಂ ಭಜಿಪರ ಭವತರು ಮೂಲಕ್ಕೆ ಕೊಡಲಿಯನ್ನೇ ಇಟ್ಟವಗೆ.

ರಾಮಗೆ ದಶರಥನಂದಗೆ ಲಕ್ಷ್ಮಣನನುಜಗೆ ಮುನಿವೃಂದ ರಕ್ಷಿಪಗೆ
ಸೀಮೆಯಿಲ್ಲದ ಮಹಿಮೆವುಳ್ಳಗೆ ರಕ್ಕಸಕುಲದ ಹಂತಕಗೆ.

ಸಾಸಿರಸಾಸಿರ ಭಾಮೆಕೈಪಿಡಿದಗೆ ಸಾಸಿರನಾಮಗೆ ಸಿರಿ ಕೃಷ್ಣಗೆ
ಸಾಸಿರಜಿಹ್ವೆಯನುಜಗೆ ಚೋರಗೆ ಸಾಸಿರ ದೈತ್ಯರ ಬಡಿದವಗೆ.

ಬುದ್ಧಗೆ ದೈತ್ಯರ ಬುದ್ಧಿಯ ಕೊಂದಗೆ ಸತಿಯರ ವ್ರತವ ಕೆಡಸಿದಗೆ
ಭೋಧನೆ ಮಾಡ್ದಗೆ ಸುರರೆಲ್ಲ ಬಿಸುಟಿದ ಶಸ್ತ್ರವ ಲೀಲೇಲಿ ನುಂಗಿದಗೆ. 

ಕಲ್ಕಿಗೆ ಹಯವೇರಿ ಬಂದವಗೆ ಕಲಿಯ ಶೌರ್ಯವನ್ನು ಮೆಟ್ಟಿದಗೆ
ಕಲಿತು ಪಾಡಲು ಭಕುತಿಯಿಂದಲಿ ಸಾತ್ವಿಕರನ್ನು  ಪೊರೆವನಿಗೆ. 

ಜಗದೊಳು ಪರನಿಗುತ್ತಮ ಪುರುಷಗೆ ಜಗದಾನಂದಗೆ ಸತ್ಯನಿಗೆ
ರಾಘವವಿಠಲಗೆ ರಾಧೆಯ ಕಾಂತಗೆ ವೃಂದಾವನದೊಳು ನೆಲಸಿದಗೆ.

Comments

Popular posts from this blog

RAMANA TUGIRO LALI PADA

Maralu Maadikondeyalle Mayadeviye

Karava Ettida Veera Hanumantha